07.11.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಎಲ್ಲರಿಗೆ ಇದೇ ಖುಷಿಯ ಸಮಾಚಾರವನ್ನು ತಿಳಿಸಿ - ಈಗ ದೈವೀ ಸಾಮ್ರಾಜ್ಯದ ಸ್ಥಾಪನೆಯಾಗುತ್ತಿದೆ, ಯಾವಾಗ ನಿರ್ವಿಕಾರಿ ಪ್ರಪಂಚವಾಗುವುದೋ ಆಗ ಉಳಿದೆಲ್ಲವೂ ವಿನಾಶವಾಗಿ ಬಿಡುತ್ತದೆ.”

ಪ್ರಶ್ನೆ:
ರಾವಣನ ಶಾಪವು ಯಾವಾಗ ಸಿಗುತ್ತದೆ? ಶಾಪಗ್ರಸ್ಥರಾಗುವ ಚಿಹ್ನೆಯೇನಾಗಿದೆ?

ಉತ್ತರ:
ಯಾವಾಗ ನೀವು ದೇಹಾಭಿಮಾನಿಗಳಾಗುತ್ತೀರೋ ಆಗ ರಾವಣನ ಶಾಪ ಸಿಗುತ್ತದೆ. ಶಾಪಗ್ರಸ್ಥ ಆತ್ಮಗಳು ವಿಕಾರಿ, ಕಂಗಾಲರಾಗುತ್ತಾ ಹೋಗುತ್ತಾರೆ, ಕೆಳಗಿಳಿಯತೊಡಗುತ್ತಾರೆ. ನೀವೀಗ ತಂದೆಯಿಂದ ಆಸ್ತಿಯನ್ನು ಪಡೆಯಲು ದೇಹೀ-ಅಭಿಮಾನಿಯಾಗಬೇಕಾಗಿದೆ. ತಮ್ಮ ದೃಷ್ಟಿ, ವೃತ್ತಿಯನ್ನು ಪಾವನ ಮಾಡಿಕೊಳ್ಳಬೇಕಾಗಿದೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ 84 ಜನ್ಮಗಳ ಕಥೆಯನ್ನು ತಿಳಿಸುತ್ತಾರೆ. ನಿಮಗೆ ಇದು ತಿಳಿದಿದೆ - ಎಲ್ಲರೂ 84 ಜನ್ಮಗಳನ್ನು ತಿಳಿದುಕೊಳ್ಳುವುದಿಲ್ಲ. ನೀವೇ ಮೊಟ್ಟ ಮೊದಲು ಸತ್ಯಯುಗದ ಆದಿಯಲ್ಲಿ ಪೂಜ್ಯ ದೇವಿ-ದೇವತೆಗಳಾಗಿದ್ದಿರಿ, ಭಾರತದಲ್ಲಿ ಮೊದಲು ಪೂಜ್ಯ, ದೇವಿ-ದೇವತಾ ಧರ್ಮದ ರಾಜ್ಯವೇ ಇತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಅಂದಮೇಲೆ ಅವಶ್ಯವಾಗಿ ಸೂರ್ಯವಂಶವಿರುವುದು. ರಾಜ ಮನೆತನದ ಮಿತ್ರ ಸಂಬಂಧಿಗಳೂ ಇರುವರು, ಪ್ರಜೆಗಳೂ ಇರುವರು. ಇದು ಒಂದು ಕಥೆಯಾಗಿದೆ. 5000 ವರ್ಷಗಳ ಮೊದಲೂ ಸಹ ಇವರ ರಾಜ್ಯವಿತ್ತು ಎಂಬುದನ್ನು ತಂದೆಯು ಸ್ಮೃತಿ ತರಿಸುತ್ತಾರೆ. ಭಾರತದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮದವರ ರಾಜ್ಯವಿತ್ತು, ಇದನ್ನು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಅವರಿಗೆ ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ಯಾವುದರ ಜ್ಞಾನ? ಎಲ್ಲರ ಒಳಹೊಕ್ಕು ಕರ್ಮ-ವಿಕರ್ಮಗಳನ್ನು ಅರಿತುಕೊಳ್ಳುವವರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಪ್ರತಿಯೊಂದು ಆತ್ಮನಿಗೆ ತನ್ನ ತನ್ನದೇ ಆದ ಪಾತ್ರವು ಸಿಕ್ಕಿದೆ. ಎಲ್ಲಾ ಆತ್ಮರು ತಮ್ಮ ಪರಮಧಾಮದಲ್ಲಿರುತ್ತಾರೆ, ಅವರಲ್ಲಿ ಇಡೀ ಪಾತ್ರವು ಅಡಕವಾಗಿದೆ. ಹೋಗಿ ಕರ್ಮ ಕ್ಷೇತ್ರದಲ್ಲಿ ತಮ್ಮ ಪಾತ್ರವನ್ನು ಅಭಿನಯಿಸಬೇಕೆಂದು ತಯಾರಾಗಿ ಕುಳಿತಿದ್ದಾರೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಎಲ್ಲವನ್ನು ಮಾಡುತ್ತೇವೆ, ಆತ್ಮವೇ ಇದು ಹುಳಿಯಾಗಿದೆ, ಇದು ಉಪ್ಪಾಗಿದೆ ಎಂದು ಹೇಳುತ್ತದೆ. ನಾವೀಗ ವಿಕಾರಿ, ಪಾಪಾತ್ಮರಾಗಿದ್ದೇವೆ. ಆಸುರೀ ಸ್ವಭಾವವಿದೆ ಎಂಬುದನ್ನೂ ಸಹ ಆತ್ಮವೇ ತಿಳಿದುಕೊಳ್ಳುತ್ತದೆ. ಆತ್ಮವೇ ಇಲ್ಲಿ ಕರ್ಮ ಕ್ಷೇತ್ರದಲ್ಲಿ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ ಅಂದಮೇಲೆ ಈ ನಿಶ್ಚಯ ಮಾಡಿಕೊಳ್ಳಬೇಕಲ್ಲವೆ! ನಾವಾತ್ಮಗಳೇ ಎಲ್ಲವನ್ನೂ ಮಾಡುತ್ತೇವೆ. ಈಗ ತಂದೆಯೊಂದಿಗೆ ಮಿಲನ ಮಾಡಿದ್ದೇವೆ, ಪುನಃ 5000 ವರ್ಷಗಳ ನಂತರ ಮಿಲನ ಮಾಡುತ್ತೇವೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಪೂಜ್ಯ ಮತ್ತು ಪೂಜಾರಿ, ಪಾವನ ಮತ್ತು ಪತಿತರು ನಾವೇ ಆಗುತ್ತಾ ಬಂದಿದ್ದೇವೆ. ಪೂಜ್ಯರಾಗಿದ್ದಾಗ ಪತಿತರು ಯಾರೂ ಇರುವುದಿಲ್ಲ. ಮತ್ತೆ ಪೂಜಾರಿಗಳಾದಾಗ ಯಾರೂ ಪಾವನರಿರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಪಾವನ, ಪೂಜ್ಯರಿರುತ್ತಾರೆ. ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುತ್ತದೆ ಆಗ ಎಲ್ಲರೂ ಪತಿತ-ಪೂಜಾರಿಗಳಾಗುತ್ತಾರೆ. ಶಿವ ತಂದೆಯು ತಿಳಿಸುತ್ತಾರೆ - ನೋಡಿ, ಶಂಕರಾಚಾರ್ಯರೂ ಸಹ ನನ್ನ ಪೂಜಾರಿಯಾಗಿದ್ದಾರೆ, ನನ್ನನ್ನೇ ಪೂಜಿಸುತ್ತಾರಲ್ಲವೆ. ಶಿವನ ಚಿತ್ರವು ಕೆಲವರ ಬಳಿ ಚಿನ್ನದಿಂದ, ಇನ್ನು ಕೆಲವರ ಬಳಿ ವಜ್ರದಿಂದ, ಕೆಲವರ ಬಳಿ ಬೆಳ್ಳಿಯಿಂದ ಮಾಡಿಸಿರುತ್ತಾರೆ. ಈಗ ಯಾರು ಪೂಜೆ ಮಾಡುವರೋ ಆ ಪೂಜಾರಿಗಳಿಗೆ ಪೂಜ್ಯರೆಂದು ಹೇಳಲು ಸಾಧ್ಯವಿಲ್ಲ. ಇಡೀ ಪ್ರಪಂಚದಲ್ಲಿ ಈ ಸಮಯದಲ್ಲಿ ಯಾರೊಬ್ಬರೂ ಪೂಜ್ಯರಿಲ್ಲ. ಆರಂಭದಲ್ಲಿ ಪೂಜ್ಯ, ಪವಿತ್ರರಾಗಿರುತ್ತಾರೆ ನಂತರ ಅಪವಿತ್ರರಾಗುತ್ತಾರೆ. ಹೊಸ ಪ್ರಪಂಚದಲ್ಲಿ ಪವಿತ್ರರಿರುತ್ತಾರೆ, ಪವಿತ್ರರೇ ಪೂಜೆಗೆ ಅರ್ಹರಾಗುತ್ತಾರೆ. ಹೇಗೆ ಕುಮಾರಿಯು ಪವಿತ್ರಳಾಗಿದ್ದಾಗ ಪೂಜೆಗೆ ಯೋಗ್ಯಳಾಗುತ್ತಾಳೆ. ಅಪವಿತ್ರಳಾದರೆ ಮತ್ತೆ ಎಲ್ಲರ ಮುಂದೆ ತಲೆ ಬಾಗಿಸಬೇಕಾಗುತ್ತದೆ. ಪೂಜೆಯ ಸಾಮಗ್ರಿಗಳು ಎಷ್ಟೊಂದಿವೆ. ಎಲ್ಲಿಯಾದರೂ ಪ್ರದರ್ಶನಿ, ಮ್ಯೂಸಿಯಂ ಇತ್ಯಾದಿಗಳನ್ನು ತೆರೆಯುತ್ತೀರೆಂದರೆ ಮೇಲೆ ತ್ರಿಮೂರ್ತಿ ಶಿವನ ಚಿತ್ರವು ಅವಶ್ಯವಾಗಿ ಇರಬೇಕು. ಕೆಳಗಡೆ ಗುರಿ-ಉದ್ದೇಶದ ಈ ಲಕ್ಷ್ಮೀ-ನಾರಾಯಣರ ಚಿತ್ರವಿರಬೇಕು ಅಂದರೆ ಈ ಪೂಜ್ಯ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೇವೆ. ಅಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ ಎಂದು ನೀವು ತಿಳಿಸಬಹುದು. ಪ್ರದರ್ಶನಿಗಳಲ್ಲಿ ಭಾಷಣ ಇತ್ಯಾದಿಗಳನ್ನು ಮಾಡಲು ಸಾಧ್ಯವಿಲ್ಲ. ತಿಳಿಸುವುದಕ್ಕಾಗಿ ಬೇರೆ ಪ್ರಬಂಧವನ್ನಿಡಬೇಕು. ಮುಖ್ಯ ಮಾತೇ ಇದಾಗಿದೆ - ನಾವು ಭಾರತವಾಸಿಗಳಿಗೆ ಖುಷಿಯ ಸಮಾಚಾರವನ್ನು ತಿಳಿಸುತ್ತೇವೆ, ನಾವು ಇಂತಹ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ, ಮೊದಲಿಗೆ ಈ ದೈವೀ ಸಾಮ್ರಾಜ್ಯವಿತ್ತು, ಈಗ ಇಲ್ಲ. ಪುನಃ ಇದರ ಸ್ಥಾಪನೆಯಾಗುತ್ತಿದೆ. ಮತ್ತೆಲ್ಲವೂ ವಿನಾಶವಾಗಿ ಬಿಡುವುದು. ಸತ್ಯಯುಗದಲ್ಲಿ ಯಾವಾಗ ಈ ಒಂದು ಧರ್ಮವಿತ್ತೋ ಆಗ ಈ ಅನೇಕ ಧರ್ಮಗಳಿರಲಿಲ್ಲ. ಈಗ ಅನೇಕ ಧರ್ಮಗಳು ಸೇರಿ ಒಂದಾಗಬೇಕು ಆದರೆ ಅದು ಸಾಧ್ಯವಿಲ್ಲ. ಧರ್ಮಪಿತರು ಒಬ್ಬರು ಇನ್ನೊಬ್ಬರ ಹಿಂದೆ ಬರುತ್ತಿದ್ದಾರೆ ಮತ್ತು ವೃದ್ಧಿಯಾಗುತ್ತಾ ಇರುತ್ತಾರೆ. ಮೊಟ್ಟ ಮೊದಲಿನ ಆದಿ ಸನಾತನ ದೇವಿ-ದೇವತಾ ಧರ್ಮವೇ ಪ್ರಾಯಲೋಪವಾಗಿದೆ. ತಮ್ಮನ್ನು ದೇವಿ-ದೇವತಾ ಧರ್ಮದವರೆಂದು ಕರೆಸಿಕೊಳ್ಳುವವರು ಯಾರೊಬ್ಬರೂ ಇಲ್ಲ. ಇದಕ್ಕೆ ವಿಕಾರಿ ಪ್ರಪಂಚವೆಂದೇ ಕರೆಯಲಾಗುತ್ತದೆ. ನೀವು ಈ ರೀತಿ ಹೇಳಿರಿ - ನಾವು ನಿಮಗೆ ಖುಷಿಯ ಸಂದೇಶವನ್ನು ತಿಳಿಸುತ್ತೇವೆ, ಶಿವ ತಂದೆಯು ನಿರ್ವಿಕಾರಿ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ, ನಾವು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೇವೆ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಮೊಟ್ಟ ಮೊದಲಿಗೆ ನಾವು ಸಹೋದರ-ಸಹೋದರರಾಗಿರುತ್ತೇವೆ ನಂತರ ಸಾಕಾರದಲ್ಲಿ ರಚನೆಯಾದಾಗ ನಾವು ಸಹೋದರ-ಸಹೋದರಿಯರಾಗುತ್ತೇವೆ. ಬಾಬಾ, ನಾವು ತಮ್ಮ ಮಕ್ಕಳಾಗಿದ್ದೇವೆ ಎಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಸಹೋದರ-ಸಹೋದರಿಯರ ನಡುವೆ ಕೆಟ್ಟ ದೃಷ್ಟಿಯಿರಲು ಸಾಧ್ಯವಿಲ್ಲ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಬೇಕು ಆಗಲೇ ಪವಿತ್ರ ವಿಶ್ವದ ಮಾಲೀಕರಾಗುವಿರಿ. ನೀವು ತಿಳಿದುಕೊಂಡಿದ್ದೀರಿ - ಗತಿ-ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಹಳೆಯ ಪ್ರಪಂಚವು ಬದಲಾಗಿ ಅವಶ್ಯವಾಗಿ ಹೊಸ ಪ್ರಪಂಚವು ಸ್ಥಾಪನೆಯಾಗಲಿದೆ. ಅದನ್ನು ಭಗವಂತನೇ ಮಾಡುತ್ತಾರೆ. ಈಗ ಅವರು ಹೊಸ ಪ್ರಪಂಚವನ್ನು ಹೇಗೆ ರಚಿಸುತ್ತಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈಗ ಹಳೆಯ ಪ್ರಪಂಚವೂ ಇದೆ. ಇದೇನೂ ಸಮಾಪ್ತಿಯಾಗಿಲ್ಲ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಚಿತ್ರಗಳಲ್ಲಿಯೂ ಇದೆ. ಈ ಬ್ರಹ್ಮಾರವರ ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಬ್ರಹ್ಮನಿಗೆ ಜೋಡಿಯಿಲ್ಲ, ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ತಿಳಿಸುವುದಕ್ಕೂ ಯುಕ್ತಿ ಬೇಕು. ಶಿವ ತಂದೆಯು ಬ್ರಹ್ಮಾರವರಲ್ಲಿ ಪ್ರವೇಶ ಮಾಡಿ ನಮ್ಮನ್ನು ತಮ್ಮ ಮಕ್ಕಳನ್ನಾಗಿ ಮಾಡಿಕೊಳ್ಳುತ್ತಾರೆ. ಶರೀರದಲ್ಲಿ ಪ್ರವೇಶ ಮಾಡಿದಾಗಲೇ ಹೇ ಆತ್ಮ, ನೀವು ನನ್ನ ಮಕ್ಕಳಾಗಿದ್ದೀರಿ ಎಂದು ಹೇಳುತ್ತಾರೆ. ಆತ್ಮಗಳಂತೂ ಅವರ ಸಂತಾನರು ಆಗಿಯೇ ಇದ್ದೇವೆ ಆದರೆ ಬ್ರಹ್ಮಾರವರ ಮೂಲಕ ಸೃಷ್ಟಿಯು ರಚನೆಯಾದಾಗ ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರಾಗುತ್ತೇವೆ. ಅಂದಮೇಲೆ ಸಹೋದರ-ಸಹೋದರರಾದಿರಿ. ಬೇರೆ ದೃಷ್ಟಿಯು ಹೊರಟು ಹೋಗುತ್ತದೆ. ನಾವು ಶಿವ ತಂದೆಯಿಂದ ಪಾವನರಾಗುವ ಆಸ್ತಿಯನ್ನು ಪಡೆಯುತ್ತೇವೆ. ರಾವಣನಿಂದ ನಮಗೆ ಶಾಪ ಸಿಗುತ್ತದೆ. ನಾವೀಗ ದೇಹೀ-ಅಭಿಮಾನಿಗಳಾದರೆ ತಂದೆಯಿಂದ ಆಸ್ತಿಯು ಸಿಗುತ್ತದೆ. ದೇಹಾಭಿಮಾನಿಗಳಾಗುವುದರಿಂದ ರಾವಣನ ಶಾಪ ಸಿಗುತ್ತದೆ. ಶಾಪ ಸಿಗುವ ಕಾರಣ ಕೆಳಗಿಳಿಯುತ್ತೀರಿ. ಈಗ ಭಾರತವು ಶಾಪಗ್ರಸ್ಥವಾಗಿದೆಯಲ್ಲವೆ. ಭಾರತವನ್ನು ಇಷ್ಟು ಕಂಗಾಲ, ವಿಕಾರಿಯನ್ನಾಗಿ ಯಾರು ಮಾಡಿದರು? ಯಾರದೋ ಶಾಪವಿರಬೇಕಲ್ಲವೆ. ಇದು ರಾವಣರೂಪಿ ಮಾಯೆಯ ಶಾಪವಾಗಿದೆ. ಪ್ರತೀ ವರ್ಷ ರಾವಣನನ್ನು ಸುಡುತ್ತಾರೆ ಅಂದಮೇಲೆ ರಾವಣನು ಶತ್ರುವಲ್ಲವೆ. ಧರ್ಮದಲ್ಲಿಯೇ ಶಕ್ತಿಯಿರುತ್ತದೆ. ನಾವೀಗ ದೇವತಾ ಧರ್ಮದವರಾಗುತ್ತೇವೆ. ತಂದೆಯು ಹೊಸ ಧರ್ಮದ ಸ್ಥಾಪನೆ ಮಾಡಲು ನಿಮಿತ್ತರಾಗಿದ್ದಾರೆ. ಎಷ್ಟು ಶಕ್ತಿಶಾಲಿ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ! ನಾವು ತಂದೆಯಿಂದ ಶಕ್ತಿಯನ್ನು ಪಡೆದು ಇಡೀ ವಿಶ್ವದ ಮೇಲೆ ಜಯ ಗಳಿಸುತ್ತೇವೆ. ನೆನಪಿನ ಯಾತ್ರೆಯಿಂದಲೇ ಶಕ್ತಿ ಸಿಗುತ್ತದೆ ಮತ್ತು ವಿಕರ್ಮಗಳು ವಿನಾಶವಾಗುತ್ತವೆ. ಈ ಮಾತನ್ನೂ ಸಹ ಬರೆಯಬೇಕು, ನಾವು ಖುಷಿಯ ಸಮಾಚಾರವನ್ನು ತಿಳಿಸುತ್ತೇವೆ, ಈಗ ಈ ಧರ್ಮದ ಸ್ಥಾಪನೆಯಾಗುತ್ತಿದೆ, ಅದಕ್ಕೆ ಹೆವೆನ್ ಅಥವಾ ಸ್ವರ್ಗವೆಂದು ಹೇಳುತ್ತಾರೆ. ಈ ಮಾತುಗಳನ್ನು ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆಯಿರಿ. ತಂದೆಯು ಸಲಹೆ ನೀಡುತ್ತಾರೆ. ಇದೇ ಎಲ್ಲದಕ್ಕಿಂತ ಮುಖ್ಯ ಮಾತಾಗಿದೆ. ಈಗ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ. ಪ್ರಜಾಪಿತ ಬ್ರಹ್ಮನೂ ಕುಳಿತಿದ್ದಾರೆ. ನಾವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಶ್ರೀಮತದಂತೆ ಈ ಕಾರ್ಯ ಮಾಡುತ್ತಿದ್ದೇವೆ. ಬ್ರಹ್ಮನ ಮತವಿಲ್ಲ, ಶ್ರೀಮತವು ಪರಮಪಿತ ಪರಮಾತ್ಮ ಶಿವನ ಮತವಾಗಿದೆ, ಇವರೇ ಎಲ್ಲರ ತಂದೆಯಾಗಿದ್ದಾರೆ. ಆ ತಂದೆಯೇ ಒಂದು ಧರ್ಮದ ಸ್ಥಾಪನೆ ಅನೇಕ ಧರ್ಮಗಳ ವಿನಾಶ ಮಾಡುತ್ತಾರೆ. ನಾವು ರಾಜಯೋಗವನ್ನು ಕಲಿತು ಇಂತಹ ಶ್ರೇಷ್ಠರಾಗುತ್ತೇವೆ. ನಾವು ಬೇಹದ್ದಿನ ಸನ್ಯಾಸ ಮಾಡಿದ್ದೇವೆ ಏಕೆಂದರೆ ನಮಗೆ ತಿಳಿದಿದೆ - ಈ ಹಳೆಯ ಪ್ರಪಂಚವು ಭಸ್ಮವಾಗಲಿದೆ. ಹೇಗೆ ಲೌಕಿಕ ತಂದೆಯು ಹೊಸ ಮನೆಯನ್ನು ಕಟ್ಟಿಸಿದರೆ ಹಳೆಯ ಮನೆಯೊಂದಿಗಿನ ಮಮತೆಯು ಕಳೆಯುತ್ತದೆ. ಹಾಗೆಯೇ ಇಲ್ಲಿ ತಂದೆಯು ತಿಳಿಸುತ್ತಾರೆ - ಮಕ್ಕಳೇ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಈಗ ನಿಮಗಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇನೆ. ನೀವು ಹೊಸ ಪ್ರಪಂಚಕ್ಕಾಗಿ ಓದುತ್ತೀರಿ. ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯು ಸಂಗಮದಲ್ಲಿಯೇ ಆಗುತ್ತದೆ. ಯುದ್ಧವಾಗುವುದು, ಪ್ರಾಕೃತಿಕ ವಿಕೋಪಗಳಾಗುವವು. ಸತ್ಯಯುಗದಲ್ಲಿ ಈ ದೇವಿ-ದೇವತೆಗಳ ರಾಜ್ಯವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಉಳಿದೆಲ್ಲರೂ ಎಲ್ಲಿದ್ದರು? ಈ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಈ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ಬೇರೆ ಕೆಲಸಗಳನ್ನು ಮಾಡುವುದಿಲ್ಲವೆಂದಲ್ಲ. ಪತ್ರಗಳನ್ನು ಬರೆಯುವುದು, ಓದುವುದು, ಮನೆಯ ವಿಚಾರ ಮಾಡುವುದು, ಹೀಗೆ ಎಷ್ಟೊಂದು ಆಲೋಚನೆಯಿರುತ್ತದೆ ಆದರೂ ಸಹ ತಂದೆಯನ್ನು ನೆನಪು ಮಾಡುತ್ತೇನೆ. ತಂದೆಯನ್ನು ನೆನಪು ಮಾಡದಿದ್ದರೆ ವಿಕರ್ಮಗಳು ಹೇಗೆ ವಿನಾಶವಾಗುತ್ತವೆ!

ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ. ನೀವು ಅರ್ಧಕಲ್ಪಕ್ಕಾಗಿ ಪೂಜ್ಯರಾಗುತ್ತಿದ್ದೀರಿ. ಅರ್ಧಕಲ್ಪ ಪೂಜಾರಿ, ತಮೋಪ್ರಧಾನರಾಗುತ್ತೀರಿ ನಂತರ ಅರ್ಧಕಲ್ಪ ಪೂಜ್ಯ, ಸತೋಪ್ರಧಾನರಾಗಿರುತ್ತೀರಿ. ಆತ್ಮವು ಪರಮಪಿತ ಪರಮಾತ್ಮನೊಂದಿಗೆ ಬುದ್ಧಿಯೋಗವನ್ನಿಟ್ಟಾಗಲೇ ಪಾರಸವಾಗುತ್ತದೆ. ನೆನಪು ಮಾಡುತ್ತಾ-ಮಾಡುತ್ತಾ ಕಲಿಯುಗದಿಂದ ಸತ್ಯಯುಗದಲ್ಲಿ ಹೋಗುತ್ತದೆ. ಪತಿತ-ಪಾವನನೆಂದು ಒಬ್ಬರಿಗೇ ಹೇಳಲಾಗುತ್ತದೆ. ಮುಂದೆ ಹೋದಂತೆ ನಿಮ್ಮ ಹೆಸರು ಬಹಳಷ್ಟು ಪ್ರಸಿದ್ಧವಾಗುವುದು. ಇದು ಎಲ್ಲಾ ಧರ್ಮದವರಿಗಾಗಿ ಇದೆ. ನೀವು ಇದನ್ನೂ ಸಹ ಹೇಳುತ್ತೀರಿ - ತಂದೆಯು ತಿಳಿಸುತ್ತಾರೆ, ನಾನೇ ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ನೀವು ಪಾವನರಾಗಿ ಬಿಡುತ್ತೀರಿ. ಉಳಿದೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಮನೆಗೆ ಹೋಗುತ್ತಾರೆ. ಯಾವುದೇ ಮಾತಿನಲ್ಲಿ ತಬ್ಬಿಬ್ಬಾದರೆ ನೀವು ಕೇಳಬಹುದು. ಸತ್ಯಯುಗದಲ್ಲಿ ಬಹಳ ಕೆಲವರೇ ಇರುತ್ತಾರೆ, ಈಗಂತೂ ಅನೇಕ ಧರ್ಮಗಳಿವೆ. ಅವಶ್ಯವಾಗಿ ಲೆಕ್ಕಾಚಾರಗಳನ್ನು ಮುಗಿಸಿ ಮೊಟ್ಟ ಮೊದಲು ಹೇಗಿದ್ದಿರೋ ಆ ರೀತಿ ಆಗುವಿರಿ. ವಿಸ್ತಾರದಲ್ಲಿ ಹೋಗುವುದೇಕೆ? ನಿಮಗೆ ತಿಳಿದಿದೆ, ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ ಏಕೆಂದರೆ ಇವರೆಲ್ಲರೂ ಸತ್ಯಯುಗದಲ್ಲಿರುವುದಿಲ್ಲ. ತಂದೆಯು ಒಂದು ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶ ಮಾಡುವುದಕ್ಕಾಗಿಯೇ ಬರುತ್ತಾರೆ. ಈಗ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ ಅಂದಮೇಲೆ ಸತ್ಯಯುಗವು ಅವಶ್ಯವಾಗಿ ಬರುವುದು. ಚಕ್ರವು ಸುತ್ತುತ್ತಾ ಇರುತ್ತದೆ. ಅತಿ ಹೆಚ್ಚಿನ ವಿಚಾರಗಳಲ್ಲಿ ಹೋಗಬಾರದು. ಮೂಲ ಮಾತೇನೆಂದರೆ ನಾವು ಸತೋಪ್ರಧಾನರಾದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ಕುಮಾರಿಯರಂತೂ ಈ ಸೇವೆಯಲ್ಲಿ ತೊಡಗಬೇಕಾಗಿದೆ. ಕುಮಾರಿಯ ಸಂಪಾದನೆಯನ್ನು ತಂದೆ-ತಾಯಿಗಳು ತಿನ್ನುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕುಮಾರಿಯರೂ ಸಹ ಸಂಪಾದಿಸಬೇಕಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಈಗ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ. ನಾವು ರಾಜಯೋಗಿಗಳಾಗಿದ್ದೇವೆ ಅಂದಮೇಲೆ ತಂದೆಯಿಂದ ಅವಶ್ಯವಾಗಿ ರಾಜ್ಯ ಪದವಿ ಪಡೆಯಬೇಕಾಗಿದೆ.

ನೀವೀಗ ಪಾಂಡವ ಸೇನೆಯಾಗಿದ್ದೀರಿ. ತಮ್ಮ ಸರ್ವೀಸ್ ಮಾಡುತ್ತಲೂ ಸಹ ಇದೇ ಸಂಕಲ್ಪವನ್ನಿಡಬೇಕು - ನಾವು ಹೋಗಿ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕು. ಎಷ್ಟು ಮಾಡುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಈ ಸ್ಥಿತಿಯಲ್ಲಿ ನಾವು ಒಂದುವೇಳೆ ಶರೀರವನ್ನು ಬಿಟ್ಟರೆ ನಮಗೆ ಯಾವ ಪದವಿ ಸಿಗಬಹುದು ಎಂದು ತಂದೆಯನ್ನು ಕೇಳಿದರೆ ಕೂಡಲೇ ತಂದೆಯು ತಿಳಿಸಿ ಬಿಡುತ್ತಾರೆ - ಸರ್ವೀಸ್ ಮಾಡುವುದಿಲ್ಲ. ಆದ್ದರಿಂದಲೇ ಸಾಧಾರಣ ಮನೆಯಲ್ಲಿ ಜನ್ಮ ತೆಗೆದುಕೊಳ್ಳುವರು ಮತ್ತೆ ಬಂದು ಜ್ಞಾನವನ್ನು ತಿಳಿದುಕೊಳ್ಳುವುದಂತೂ ಬಹಳ ಪರಿಶ್ರಮದ ಕೆಲಸ ಏಕೆಂದರೆ ಚಿಕ್ಕ ಮಗುವಿಗೆ ಜ್ಞಾನವು ಅಷ್ಟು ಅರ್ಥವಾಗುವುದಿಲ್ಲ. ತಿಳಿದುಕೊಳ್ಳಿ, 2-3 ವರ್ಷಗಳ ಮಗುವಾಗಿದ್ದರೂ ಸಹ ಏನು ಓದಲು ಸಾಧ್ಯ? ನೀವು ಯಾವುದಾದರೂ ಕ್ಷತ್ರಿಯ ಕುಲದಲ್ಲಿ ಹೋಗಿ ಜನ್ಮ ತೆಗೆದುಕೊಳ್ಳುತ್ತೀರಿ. ಕೊನೆಯಲ್ಲಿ ಡಬಲ್ ಕಿರೀಟವು ಸಿಗುವುದು, ಸ್ವರ್ಗದ ಪೂರ್ಣ ಸುಖವನ್ನು ಪಡೆಯಲು ಸಾಧ್ಯವಿಲ್ಲವೆಂದು ತಂದೆಯು ತಿಳಿಸಿಬಿಡುತ್ತಾರೆ. ಯಾರು ಸರ್ವೀಸ್ ಮಾಡುವರೋ, ಓದುವರೋ ಅವರೇ ಪೂರ್ಣ ಸುಖವನ್ನು ಪಡೆಯುತ್ತಾರೆ. ಇದೇ ಚಿಂತೆಯಿರಬೇಕು - ಒಂದುವೇಳೆ ಈಗ ಶ್ರೇಷ್ಠರಾಗಲಿಲ್ಲವೆಂದರೆ ಕಲ್ಪ-ಕಲ್ಪವೂ ಆಗುವುದಿಲ್ಲ. ಪ್ರತಿಯೊಬ್ಬರೂ ಸಹ ನಾವು ಎಷ್ಟು ಅಂಕಗಳಿಂದ ತೇರ್ಗಡೆಯಾಗುತ್ತೇವೆಂದು ತಮ್ಮನ್ನು ತಾವು ತಿಳಿದುಕೊಳ್ಳಬಹುದು. ಎಲ್ಲವನ್ನು ಅರಿತುಕೊಂಡಮೇಲೆ ಡ್ರಾಮಾದಲ್ಲಿ ಪೂರ್ವ ನಿಶ್ಚಿತವು ಇದೇ ರೀತಿಯಿದೆ ಎಂದು ಹೇಳಲಾಗುತ್ತದೆ. ಮನಸ್ಸಿನಲ್ಲಿ ದುಃಖವಾಗುತ್ತದೆಯಲ್ಲವೆ. ಮನುಷ್ಯರು ಕುಳಿತು-ಕುಳಿತಿದ್ದಂತೆಯೇ ಮರಣ ಹೊಂದುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆಲಸ್ಯ ಮಾಡಬೇಡಿ. ಪುರುಷಾರ್ಥ ಮಾಡಿ ಪತಿತರಿಂದ ಪಾವನರಾಗುತ್ತಾ ಇರಿ. ಮಾರ್ಗವನ್ನು ತಿಳಿಸುತ್ತಾ ಇರಿ. ಯಾವುದೇ ಮಿತ್ರ ಸಂಬಂಧಿ ಮೊದಲಾದವರಿದ್ದರೆ ಅವರ ಮೇಲೂ ನಿಮಗೆ ದಯೆ ಬರಬೇಕು. ಇವರು ವಿಕಾರವಿಲ್ಲದೆ, ಕೆಟ್ಟ ಪದಾರ್ಥಗಳನ್ನು ತಿನ್ನದೇ ಇರುವುದಕ್ಕೆ ಸಾಧ್ಯವಿಲ್ಲವೆಂಬುದನ್ನೂ ಸಹ ನೋಡುತ್ತೀರಿ ಆದರೂ ಸಹ ತಿಳಿಸುತ್ತಾ ಇರಬೇಕು. ಒಂದುವೇಳೆ ಅವರು ಒಪ್ಪದಿದ್ದರೆ ಅವರು ನಮ್ಮ ಕುಲದವರಲ್ಲವೆಂದು ತಿಳಿಯಿರಿ. ಪರಿಶ್ರಮ ಪಟ್ಟು ತಂದೆಯ ಮನೆ ಮತ್ತು ಮಾವನ ಮನೆಯವರ ಕಲ್ಯಾಣ ಮಾಡಬೇಕು. ಈ ರೀತಿಯೂ ಆಗಬಾರದು, ಇವರಂತೂ ನಮ್ಮೊಂದಿಗೆ ಮಾತನಾಡುವುದೂ ಇಲ್ಲ, ಮುಖ ತಿರುಗಿಸಿಕೊಂಡಿದ್ದಾರೆ ಎನ್ನುವಂತೆ ಇರಬಾರದು. ನಾವು ಅವರ ಕಲ್ಯಾಣವನ್ನೂ ಮಾಡಬೇಕಾಗಿದೆ, ಎಲ್ಲರೊಂದಿಗೆ ಜೊತೆಗೂಡಬೇಕು. ಬಹಳ ದಯಾಹೃದಯಿಗಳಾಗಬೇಕಾಗಿದೆ. ನಾವು ಸುಖದ ಕಡೆ ಹೋಗುತ್ತೇವೆ ಅಂದಮೇಲೆ ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಲ್ಲವೆ. ನೀವು ಅಂಧರಿಗೆ ಊರುಗೋಲಾಗಿದ್ದೀರಿ. ನೀನು ಅಂಧರಿಗೆ ಊರುಗೋಲಾಗಿದ್ದೀಯಾ..... ಎಂದು ಹಾಡುತ್ತಾರೆ. ಸ್ಥೂಲ ಕಣ್ಣುಗಳಂತೂ ಎಲ್ಲರಿಗೂ ಇದೆ ಆದರೂ ಸಹ ಈ ರೀತಿ ಕರೆಯುತ್ತಾರೆ ಏಕೆಂದರೆ ಜ್ಞಾನದ ಮೂರನೆಯ ನೇತ್ರವಿಲ್ಲ, ಸುಖ-ಶಾಂತಿಯ ಮಾರ್ಗವನ್ನು ತಿಳಿಸುವವರು ತಂದೆಯೊಬ್ಬರೇ ಆಗಿದ್ದಾರೆ. ಇದೂ ಸಹ ನೀವು ಮಕ್ಕಳ ಬುದ್ಧಿಯಲ್ಲಿ ಈಗಷ್ಟೇ ಇದೆ, ಮೊದಲು ತಿಳಿದುಕೊಂಡಿರಲಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಂತ್ರಗಳನ್ನು ಜಪಿಸುತ್ತಾರೆ. ರಾಮ, ರಾಮ ಎಂದು ಹೇಳಿ ಮೀನುಗಳಿಗೆ ತಿನ್ನಿಸುತ್ತಾರೆ, ಇರುವೆಗಳಿಗೆ ತಿನ್ನಿಸುತ್ತಾರೆ. ಈಗ ಜ್ಞಾನ ಮಾರ್ಗದಲ್ಲಂತೂ ಏನೂ ಮಾಡುವ ಅವಶ್ಯಕತೆಯಿಲ್ಲ. ಪಕ್ಷಿಗಳಂತೂ ಬಹಳಷ್ಟು ಸಾಯುತ್ತವೆ, ಒಂದು ಬಿರುಗಾಳಿ ಬಂದರೆ ಸಾಕು ಎಷ್ಟೊಂದು ಸತ್ತು ಹೋಗುತ್ತವೆ. ಇನ್ನು ಮುಂದೆ ಬಹಳಷ್ಟು ಜೋರಾಗಿ ಪ್ರಾಕೃತಿಕ ವಿಕೋಪಗಳಾಗುವವು. ಈಗಲೂ ಸಹ ಅದರ ಮುನ್ಸೂಚನೆಗಳು ಕಾಣುತ್ತಿರುತ್ತವೆ. ಇದೆಲ್ಲವೂ ವಿನಾಶವಾಗಲೇಬೇಕಾಗಿದೆ. ನಾವೀಗ ಸ್ವರ್ಗದಲ್ಲಿ ಹೋಗುತ್ತೇವೆ, ಅಲ್ಲಿ ನಮ್ಮ ಮಹಲುಗಳು ಬಹಳ ಸುಂದರವಾಗಿ ಕಟ್ಟಿಸುತ್ತೇವೆ. ಹೇಗೆ ಕಲ್ಪದ ಮೊದಲೂ ಸಹ ಕಟ್ಟಿಸಿದ್ದೆವು. ಕಲ್ಪದ ಹಿಂದೆ ಹೇಗಿತ್ತೋ ಅದೇರೀತಿ ಆಗುತ್ತದೆ. ಆ ಸಮಯದಲ್ಲಿ ಆ ಸ್ಮೃತಿಯು ಬುದ್ಧಿಗೆ ಬಂದು ಬಿಡುತ್ತದೆ. ಅದರ ಚಿಂತನೆಯನ್ನು ಈಗೇಕೆ ಮಾಡಬೇಕು? ಇದಕ್ಕಿಂತಲೂ ತಂದೆಯ ನೆನಪಿನಲ್ಲಿರುವುದು ಉತ್ತಮವಾಗಿದೆ. ಅಂದಾಗ ನೆನಪಿನ ಯಾತ್ರೆಯನ್ನು ಮರೆಯಬೇಡಿ. ಮಹಲುಗಳು ಕಲ್ಪದ ಹಿಂದಿನ ತರಹವೇ ತಯಾರಾಗುತ್ತವೆ ಆದರೆ ಈಗ ನೆನಪಿನ ಯಾತ್ರೆಯಲ್ಲಿದ್ದು ಸಂಬಂಧವನ್ನು ನಿಭಾಯಿಸಬೇಕಾಗಿದೆ ಮತ್ತು ಬಹಳ ಖುಷಿಯಲ್ಲಿರಬೇಕಾಗಿದೆ - ನಮಗೆ ತಂದೆ, ಶಿಕ್ಷಕ, ಸದ್ಗುರು ಸಿಕ್ಕಿದ್ದಾರೆ, ಈ ಖುಷಿಯಲ್ಲಿ ರೋಮಾಂಚನವಾಗಬೇಕು. ನಿಮಗೆ ತಿಳಿದಿದೆ - ನಾವು ಅಮರಪುರಿಯ ಮಾಲೀಕರಾಗಲು ಬಂದಿದ್ದೇವೆ, ಈ ಖುಷಿಯು ಸ್ಥಿರವಾಗಿರಬೇಕು. ಇಲ್ಲಿ ಖುಷಿಯಿದ್ದಾಗಲೇ ಅದು 21 ಜನ್ಮಗಳವರೆಗೆ ಸ್ಥಿರವಾಗಿ ಬಿಡುವುದು. ಅನೇಕರಿಗೆ ನೆನಪು ತರಿಸುತ್ತಾ ಇರಿ ಆಗಲೂ ಸಹ ತಮಗೂ ಸಹ ನೆನಪು ಹೆಚ್ಚುವುದು. ಮತ್ತೆ ಅದೇ ಹವ್ಯಾಸವಾಗುವುದು. ನಿಮಗೆ ತಿಳಿದಿದೆ, ಈ ಅಪವಿತ್ರ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ನೀವು ಬ್ರಾಹ್ಮಣರಿಗೆ ಈ ಚಿಂತನೆಯಿದೆ - ಈ ಇಡೀ ಪ್ರಪಂಚವೇ ಸಮಾಪ್ತಿಯಾಗುವುದಿದೆ. ಸತ್ಯಯುಗದಲ್ಲಿ ಇದೇನೂ ತಿಳಿಯುವುದಿಲ್ಲ, ಈಗ ಅಂತ್ಯವಾಗಿದೆ. ನೀವು ನೆನಪಿಗಾಗಿಯೇ ಪುರುಷಾರ್ಥ ಮಾಡುತ್ತಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪತಿತರಿಂದ ಪಾವನರಾಗುವ ಪುರುಷಾರ್ಥದಲ್ಲಿ ಆಲಸ್ಯ ಮಾಡಬಾರದು. ಯಾವುದೇ ಮಿತ್ರ ಸಂಬಂಧಿ ಮೊದಲಾದವರಿದ್ದರೆ ಅವರ ಮೇಲೂ ದಯೆ ತೋರಿಸಿ ತಿಳಿಸಬೇಕು, ಬಿಟ್ಟು ಬಿಡಬಾರದು.

2. ಇವರು ಮುಖವನ್ನು ತಿರುಗಿಸಿಕೊಂಡಿದ್ದಾರೆ ಎಂದು ಅನ್ಯರು ಹೇಳುವಂತಹ ಚಲನೆ ನಿಮ್ಮದಿರಬಾರದು. ದಯಾಹೃದಯಿಗಳಾಗಿ ಎಲ್ಲರ ಕಲ್ಯಾಣ ಮಾಡಬೇಕು ಮತ್ತು ಎಲ್ಲಾ ವಿಚಾರಗಳನ್ನು ಬಿಟ್ಟು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ.

ವರದಾನ:
ಅಳವಡಿಸಿಕೊಳ್ಳುವ ಶಕ್ತಿಯ ಮುಖಾಂತರ ತಪ್ಪನ್ನೂ ಸಹ ಸರಿಯಾಗಿ ಮಾಡುವಂತಹ ವಿಶ್ವ ಪರಿವರ್ತಕ ಭವ.

ಬೇರೆಯವರ ತಪ್ಪನ್ನು ನೋಡಿ ಸ್ವಯಂ ತಪ್ಪು ಮಾಡಬೇಡಿ. ಒಂದುವೇಳೆ ಯಾರಾದರೂ ತಪ್ಪು ಮಾಡಿದರೆ ನಾವು ಸರಿಯಾಗಿರಬೇಕು, ಅವರ ತಪ್ಪಿನ ಪ್ರಭಾವದಲ್ಲಿ ಬರಬಾರದು, ಯಾರು ಪ್ರಭಾವದಲ್ಲಿ ಬಂದು ಬಿಡುತ್ತಾರೆ ಅವರು ಬೇಜವಾಬ್ದಾರರಾಗಿ ಬಿಡುತ್ತಾರೆ. ಪ್ರತಿಯೊಬ್ಬರೂ ಕೇವಲ ಈ ಒಂದು ಜವಾಬ್ದಾರಿಯನ್ನು ತೆಗೆದುಕೊಳ್ಳಿ ನಾನು ಸರಿಯಾದ ಮಾರ್ಗದಲ್ಲಿಯೇ ಇರುತ್ತೇನೆ, ಒಂದುವೇಳೆ ಬೇರೆಯವರು ತಪ್ಪು ಮಾಡಿದರೆ ಆಗ ಆ ಸಮಯದಲ್ಲಿ ಅಳವಡಿಸಿಕೊಳ್ಳುವ ಶಕ್ತಿಯನ್ನು ಉಪಯೋಗಿಸಿ. ಯಾರದೇ ತಪ್ಪನ್ನು ಸೂಚಿಸುವ ಬದಲಾಗಿ ಅವರಿಗೆ ಸಹಯೋಗದ ಸೂಚನೆಯನ್ನು ಕೊಡಿ ಅರ್ಥಾತ್ ಸಹಯೋಗದಿಂದ ಅವರನ್ನು ಭರ್ಪೂರ್ ಮಾಡಿ ಆಗ ವಿಶ್ವ ಪರಿವರ್ತನೆಯ ಕಾರ್ಯ ಸಹಜವಾಗಿ ಆಗಿ ಬಿಡುವುದು.

ಸ್ಲೋಗನ್:
ನಿರಂತರ ಯೋಗಿ ಆಗಬೇಕಾದರೆ ಮಿತವಾದ ನಾನು ಮತ್ತು ನನ್ನತನವನ್ನು ಅಪರಿಮಿತದಲ್ಲಿ ಪರಿವರ್ತನೆ ಮಾಡಿ.