24.11.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ದುಃಖವನ್ನು ಸಹನೆ ಮಾಡುವುದರಲ್ಲಿ ಬಹಳಷ್ಟು ಸಮಯವನ್ನು ವ್ಯರ್ಥ ಮಾಡಿದ್ದೀರಿ, ಈಗ ಪ್ರಪಂಚವು
ಬದಲಾಗುತ್ತಿದೆ, ನೀವು ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಿ ಆಗ ಸಮಯವು ಸಫಲವಾಗುವುದು”
ಪ್ರಶ್ನೆ:
21 ಜನ್ಮಗಳಿಗಾಗಿ
ಲಾಟರಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಪುರುಷಾರ್ಥವೇನು?
ಉತ್ತರ:
21 ಜನ್ಮಗಳ ಲಾಟರಿಯನ್ನು ಪಡೆಯಬೇಕೆಂದರೆ ಮೋಹಜೀತರಾಗಿ ಒಬ್ಬ ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಿ.
ಸದಾ ಇದೇ ಸ್ಮೃತಿಯಲ್ಲಿರಲಿ - ಈಗ ಈ ಹಳೆಯ ಪ್ರಪಂಚವು ಬದಲಾಗುತ್ತಿದೆ, ನಾವು ಹೊಸ ಪ್ರಪಂಚದಲ್ಲಿ
ಹೋಗುತ್ತಿದ್ದೇವೆ. ಈ ಹಳೆಯ ಪ್ರಪಂಚವನ್ನು ನೋಡಿಯೂ ನೋಡದಂತಿರಬೇಕಾಗಿದೆ. ಸುಧಾಮನ ತರಹ ಹಿಡಿ
ಅವಲಕ್ಕಿಯನ್ನು ಸಫಲ ಮಾಡಿ ಸತ್ಯಯುಗೀ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ, ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ
- ಆತ್ಮಿಕ ಮಕ್ಕಳು ಎಂದರೆ ಆತ್ಮಗಳು. ಆತ್ಮಿಕ ತಂದೆ ಎಂದರೆ ಆತ್ಮಗಳ ತಂದೆ ಎಂದರ್ಥ. ಇದಕ್ಕೆ
ಆತ್ಮಗಳು ಮತ್ತು ಪರಮಾತ್ಮನ ಮಿಲನವೆಂದು ಹೇಳಲಾಗುತ್ತದೆ. ಈ ಮಿಲನವು ಕಲ್ಪದಲ್ಲಿ ಒಂದೇ
ಬಾರಿಯಾಗುತ್ತದೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ವಿಚಿತ್ರ
ಮಾತಾಗಿದೆ. ವಿಚಿತ್ರ ತಂದೆಯು ವಿಚಿತ್ರ ಆತ್ಮಗಳಿಗೆ ತಿಳಿಸುತ್ತಾರೆ - ವಾಸ್ತವದಲ್ಲಿ ಆತ್ಮವು
ವಿಚಿತ್ರನಾಗಿದೆ, ಇಲ್ಲಿ ಬಂದು ಚಿತ್ರಧಾರಿ (ಶರೀರಧಾರಿ) ಯಾಗುತ್ತದೆ. ಚಿತ್ರದಿಂದ
ಪಾತ್ರವನ್ನಭಿನಯಿಸುತ್ತದೆ, ಆತ್ಮವಂತೂ ಎಲ್ಲರಲ್ಲಿಯೂ ಇದೆಯಲ್ಲವೆ. ಪ್ರಾಣಿಗಳಲ್ಲಿಯೂ ಆತ್ಮವಿದೆ,
84 ಲಕ್ಷ ಜೀವಜಂತುಗಳೆಂದು ಹೇಳುತ್ತಾರೆ, ಅದರಲ್ಲಿ ಎಲ್ಲಾ ಪ್ರಾಣಿಗಳು ಬಂದು ಬಿಡುತ್ತವೆ. ಬಹಳಷ್ಟು
ಪ್ರಾಣಿಗಳಿವೆ, ತಂದೆಯು ತಿಳಿಸುತ್ತಾರೆ - ಈ ಮಾತುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಈ
ಜ್ಞಾನವಿಲ್ಲದೆ ಮನುಷ್ಯರ ಸಮಯವು ಬಹಳ ವ್ಯರ್ಥವಾಗುತ್ತಿರುತ್ತದೆ. ಈ ಸಮಯದಲ್ಲಿ ತಂದೆಯು ನೀವು
ಮಕ್ಕಳಿಗೆ ಓದಿಸುತ್ತಾರೆ ನಂತರ ಅರ್ಧಕಲ್ಪದವರೆಗೆ ನೀವು ಪ್ರಾಲಬ್ಧವನ್ನು ಭೋಗಿಸುತ್ತೀರಿ. ಅಲ್ಲಿ
ನಿಮಗೆ ಯಾವುದೇ ತೊಂದರೆಯಿರುವುದಿಲ್ಲ. ದುಃಖವನ್ನು ಸಹನೆ ಮಾಡುವುದರಲ್ಲಿಯೇ ನಿಮ್ಮ ಸಮಯವು
ವ್ಯರ್ಥವಾಗುತ್ತದೆ. ಇಲ್ಲಂತೂ ದುಃಖವೇ ದುಃಖವಿದೆ ಆದ್ದರಿಂದ ಎಲ್ಲರೂ ತಂದೆಯನ್ನು ನೆನಪು
ಮಾಡುತ್ತಾರೆ - ಬಾಬಾ, ದುಃಖದಲ್ಲಿಯೇ ನಮ್ಮ ಸಮಯವು ವ್ಯರ್ಥವಾಗುತ್ತಿದೆ. ಇದರಿಂದ ನಮ್ಮನ್ನು ಹೊರ
ತೆಗೆಯಿರಿ, ಸುಖದಲ್ಲಿ ಸಮಯವೆಂದೂ ವ್ಯರ್ಥವಾಯಿತೆಂದು ಹೇಳುವುದಿಲ್ಲ. ಇದನ್ನೂ ಸಹ ನೀವು
ತಿಳಿದುಕೊಂಡಿದ್ದೀರಿ, ಈ ಸಮಯದಲ್ಲಿ ಮನುಷ್ಯರಿಗೇನೂ ಬೆಲೆಯಿಲ್ಲ. ನೋಡಿ, ಮನುಷ್ಯರು ಆಕಸ್ಮಿಕವಾಗಿ
ಮರಣ ಹೊಂದುತ್ತಾರೆ, ಕೇವಲ ಒಂದು ಬಿರುಗಾಳಿಗೆ ಎಷ್ಟೊಂದು ಮಂದಿ ಸಾವನ್ನಪ್ಪುತ್ತಾರೆ. ರಾವಣ
ರಾಜ್ಯದಲ್ಲಿ ಮನುಷ್ಯನಿಗೆ ಯಾವುದೇ ಬೆಲೆಯಿಲ್ಲ. ಈಗ ತಂದೆಯು ನಿಮ್ಮನ್ನು ಎಷ್ಟೊಂದು
ಬೆಲೆಯುಳ್ಳವರನ್ನಾಗಿ ಮಾಡುತ್ತಾರೆ! ಕನಿಷ್ಠರಿಂದ ಶ್ರೇಷ್ಠರನ್ನಾಗಿ ಮಾಡುತ್ತಾರೆ. ಈ ವಜ್ರ
ಸಮಾನವಾದ ಜನ್ಮವು ಅಮೂಲ್ಯವಾಗಿದೆ ಎಂದು ಗಾಯನವಿದೆ. ಈ ಸಮಯದಲ್ಲಿ ಮನುಷ್ಯರು ಕವಡೆಗಳ ಹಿಂದೆ
ಬಿದ್ದಿದ್ದಾರೆ. ಭಲೆ ಲಕ್ಷಾಧಿಪತಿ, ಕೋಟ್ಯಾಧಿಪತಿ, ಪದಮಾಪತಿಗಳಾಗಬಹುದು, ಅವರ ಬುದ್ಧಿಯೆಲ್ಲವೂ
ಅದರಲ್ಲಿಯೇ ತೊಡಗಿರುತ್ತದೆ. ಇದೆಲ್ಲವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ ಎಂದು ಅವರಿಗೆ
ಹೇಳಿದರೆ ಅವರು ಒಪ್ಪುವುದೇ ಇಲ್ಲ. ಯಾರ ಬುದ್ಧಿಯಲ್ಲಿ ಕಲ್ಪದ ಹಿಂದೆ ಕುಳಿತಿತ್ತೋ ಆದರೆ ಅವರ
ಬುದ್ಧಿಯಲ್ಲಿ ಈಗಲೂ ಕುಳಿತುಕೊಳ್ಳುತ್ತದೆ. ಇಲ್ಲವೆಂದರೆ ಎಷ್ಟಾದರೂ ತಿಳಿಸಿ ಆದರೆ ಅವರ
ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಈ ಪ್ರಪಂಚವು ಬದಲಾಗುತ್ತಿದೆ ಎಂಬುದನ್ನು ನೀವೂ ಸಹ
ನಂಬರ್ವಾರ್ ತಿಳಿದುಕೊಂಡಿದ್ದೀರಿ. ಪ್ರಪಂಚವು ಬದಲಾಗುತ್ತಿದೆ ಎಂಬುದನ್ನು ಹೊರಗಡೆ ಬರೆದರೂ ಸಹ
ನೀವು ತಿಳಿಸುವವರೆಗೆ ಯಾರಿಗೂ ಅರ್ಥವಾಗುವುದಿಲ್ಲ. ಯಾರಾದರೂ ಅರ್ಥ ಮಾಡಿಕೊಂಡರೆ ಅವರಿಗೆ ತಿಳಿಸಿ,
ಆದರೆ ತಂದೆಯನ್ನು ನೆನಪು ಮಾಡಿ ಮತ್ತು ಸತೋಪ್ರಧಾನರಾಗಿ. ಜ್ಞಾನವು ಬಹಳ ಸಹಜವಾಗಿದೆ,
ಸೂರ್ಯವಂಶಿ-ಚಂದ್ರವಂಶಿ...... ಈಗ ಪ್ರಪಂಚವು ಬದಲಾಗುತ್ತಿದೆ, ಪರಿವರ್ತನೆ ಮಾಡುವವರು ಒಬ್ಬರೇ
ತಂದೆಯಾಗಿದ್ದಾರೆ. ಇದನ್ನೂ ಸಹ ನೀವು ಯಥಾರ್ಥ ರೀತಿಯಿಂದ ತಿಳಿದುಕೊಂಡಿದ್ದೀರಿ, ಅದರಲ್ಲಿಯೂ
ನಂಬರ್ವಾರ್ ಪುರುಷಾರ್ಥದನುಸಾರ. ಮಾಯೆಯು ಪುರುಷಾರ್ಥ ಮಾಡಲು ಬಿಡುವುದಿಲ್ಲ, ಆಗ
ತಿಳಿದುಕೊಳ್ಳುತ್ತಾರೆ - ಡ್ರಾಮಾನುಸಾರ ಪುರುಷಾರ್ಥ ನಡೆಯುವುದಿಲ್ಲ ಎಂದು. ನೀವೀಗ
ತಿಳಿದುಕೊಂಡಿದ್ದೀರಿ - ಶ್ರೀಮತದಿಂದ ನಾವು ನಮಗಾಗಿ ಈ ಪ್ರಪಂಚವನ್ನು ಪರಿವರ್ತನೆ ಮಾಡುತ್ತಿದ್ದೇವೆ.
ಶ್ರೀಮತವು ಒಬ್ಬ ಶಿವ ತಂದೆಯದೇ ಆಗಿದೆ. ಶಿವ ಬಾಬಾ, ಶಿವ ಬಾಬಾ ಎಂದು ಹೇಳುವುದು ಬಹಳ ಸಹಜವಾಗಿದೆ,
ಮತ್ತ್ಯಾರೂ ಶಿವ ತಂದೆಯನ್ನಾಗಲಿ, ಆಸ್ತಿಯನ್ನಾಗಲಿ ತಿಳಿದುಕೊಂಡಿಲ್ಲ. ತಂದೆ ಎಂದರೆ ಆಸ್ತಿ. ಈಗಂತೂ
ಮೇಯರ್ರವರಿಗೂ ಸಹ ತಂದೆಯೆಂದು ಹೇಳಿ ಬಿಡುತ್ತಾರೆ. ಮಹಾತ್ಮ ಗಾಂಧೀಜಿಗೂ ತಂದೆಯೆಂದು ಹೇಳಿ
ಬಿಡುತ್ತಾರೆ. ಕೆಲವರು ಜಗದ್ಗುರು ಎಂದೂ ಹೇಳುತ್ತಾರೆ. ಜಗತ್ತ್ ಎಂದರೆ ಇಡೀ ಸೃಷ್ಟಿಯ
ಗುರುವೆಂದರ್ಥ ಆದರೆ ಯಾವುದೇ ಮನುಷ್ಯರು ಗುರುವಾಗಲು ಹೇಗೆ ಸಾಧ್ಯ! ಪತಿತ-ಪಾವನ, ಸರ್ವರ
ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ನಿರಾಕಾರನಾಗಿದ್ದಾರೆ ಅಂದಮೇಲೆ ಎಲ್ಲರನ್ನೂ
ಮುಕ್ತಗೊಳಿಸುವುದು ಹೇಗೆ? ಪ್ರಪಂಚವು ಬದಲಾಗುತ್ತದೆ ಅಂದಮೇಲೆ ಅವಶ್ಯವಾಗಿ ಪಾತ್ರದಲ್ಲಿ ಬಂದಾಗಲೇ
ತಿಳಿಯುತ್ತದೆ. ಪ್ರಳಯವಾದ ಮೇಲೆ ತಂದೆಯು ಬಂದು ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದಲ್ಲ.
ಶಾಸ್ತ್ರಗಳಲ್ಲಿ ತೋರಿಸಿದ್ದಾರೆ, ಬಹಳ ದೊಡ್ಡ ಪ್ರಳಯವಾಗುತ್ತದೆ ನಂತರ ಕೃಷ್ಣನು ಆಲದ ಎಲೆಯ ಮೇಲೆ
ಬರುತ್ತಾನೆಂದು ಹೇಳುತ್ತಾರೆ. ಆದರೆ ಈ ರೀತಿಯಂತೂ ಇಲ್ಲ. ವಿಶ್ವದ ಇತಿಹಾಸ ಭೂಗೋಳವು
ಪುನರಾವರ್ತನೆಯಾಗುತ್ತದೆಯೆಂದು ಗಾಯನವಿದೆ ಅಂದಾಗ ಪ್ರಳಯವಾಗಲು ಸಾಧ್ಯವಿಲ್ಲ. ನಿಮ್ಮ
ಮನಸ್ಸಿನಲ್ಲಿದೆ, ಈಗ ಹಳೆಯ ಪ್ರಪಂಚವು ಬದಲಾಗುತ್ತಿದೆ, ಇವೆಲ್ಲಾ ಮಾತುಗಳನ್ನು ತಂದೆಯೇ ಬಂದು
ತಿಳಿಸುತ್ತಾರೆ. ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದ ಮಾಲೀಕರಾಗಿದ್ದಾರೆ. ನೀವು ಚಿತ್ರಗಳಲ್ಲಿಯೂ
ತೋರಿಸುತ್ತೀರಿ – ಹಳೆಯ ಪ್ರಪಂಚದ ಮಾಲೀಕನು ರಾವಣನಾಗಿದ್ದಾನೆ. ರಾಮ ರಾಜ್ಯ ಮತ್ತು ರಾವಣ
ರಾಜ್ಯವೆಂದು ಗಾಯನವಿದೆಯಲ್ಲವೆ. ತಂದೆಯು ಹಳೆಯ ಆಸುರೀ ಪ್ರಪಂಚವನ್ನು ಸಮಾಪ್ತಿ ಮಾಡಿ ಹೊಸ ದೈವೀ
ಪ್ರಪಂಚವನ್ನು ಸ್ಥಾಪನೆ ಮಾಡಿಸುತ್ತಿದ್ದಾರೆ ಎಂಬುದು ನಿಮ್ಮ ಬುದ್ಧಿಯಲ್ಲಿಯೇ ಇದೆ. ತಂದೆಯು
ತಿಳಿಸುತ್ತಾರೆ - ನಾನು ಹೇಗಿದ್ದೇನೆ, ಯಾರಾಗಿದ್ದೇನೆ ಎಂಬುದನ್ನು ಯಥಾರ್ಥವಾಗಿ
ತಿಳಿದುಕೊಳ್ಳುವವರು ಕೆಲವರೇ ವಿರಳ. ಇದನ್ನೂ ನೀವು ನಂಬರ್ವಾರ್ ಪುರುಷಾರ್ಥದನುಸಾರ
ತಿಳಿದುಕೊಂಡಿದ್ದೀರಿ, ಯಾರು ಒಳ್ಳೆಯ ಪುರುಷಾರ್ಥಿಗಳಿದ್ದಾರೆಯೋ ಅವರಿಗೆ ಬಹಳ ಚೆನ್ನಾಗಿ
ನಶೆಯಿರುತ್ತದೆ. ನೆನಪಿನ ಪುರುಷಾರ್ಥಿಗಳಿಗೆ ನಿಜವಾದ ನಶೆಯಿರುತ್ತದೆ. 84 ಜನ್ಮಗಳ ಚಕ್ರದ
ಜ್ಞಾನವನ್ನು ತಿಳಿಸುವುದರಲ್ಲಿಯೂ ಕೂಡ ನೆನಪಿನ ಯಾತ್ರೆಯಲ್ಲಿರುವಷ್ಟು ನಶೆಯಿರುವುದಿಲ್ಲ. ಮೂಲ
ಮಾತು, ಪಾವನರಾಗುವುದಾಗಿದೆ. ಪತಿತ-ಪಾವನ ಬಂದು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಬಂದು
ವಿಶ್ವದ ರಾಜ್ಯಭಾಗ್ಯವನ್ನು ಕೊಡಿ ಎಂದು ಹೇಳುವುದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಕಥೆಗಳನ್ನು
ಕೇಳುತ್ತೀರಿ. ಸತ್ಯ-ಸತ್ಯವಾದ ಸತ್ಯ ನಾರಾಯಣನ ಕಥೆಯು ಇದಾಗಿದೆ. ಆ ಕಥೆಗಳನ್ನಂತೂ ನೀವು
ಜನ್ಮ-ಜನ್ಮಾಂತರದಿಂದ ಕೇಳುತ್ತಾ-ಕೇಳುತ್ತಾ ಕೆಳಗಿಳಿಯುತ್ತಲೇ ಬಂದಿದ್ದೀರಿ. ಭಾರತದಲ್ಲಿಯೇ ಈ
ಕಥೆಗಳನ್ನು ಕೇಳುವ ಪದ್ಧತಿಯಿದೆ, ಮತ್ತ್ಯಾವ ಖಂಡದಲ್ಲಿಯೂ ಈ ಕಥೆಗಳಿರುವುದಿಲ್ಲ. ಭಾರತವನ್ನು
ಧರ್ಮ ಭೂಮಿಯೆಂದು ಹೇಳುತ್ತಾರೆ. ಭಾರತದಲ್ಲಿ ಅನೇಕಾನೇಕ ಮಂದಿರಗಳಿವೆ, ಕ್ರಿಶ್ಚಿಯನ್ನರಿಗಂತೂ ಒಂದೇ
ಚರ್ಚ್ ಇರುತ್ತದೆ. ಇಲ್ಲಂತೂ ಭಿನ್ನ-ಭಿನ್ನ ಪ್ರಕಾರದ ಮಂದಿರಗಳಿರುತ್ತವೆ. ವಾಸ್ತವದಲ್ಲಿ ಶಿವ
ತಂದೆಯೊಬ್ಬರ ಮಂದಿರವೇ ಇರಬೇಕಿತ್ತು, ಒಬ್ಬರ ಹೆಸರೇ ಇರಬೇಕು ಆದರೆ ನೋಡಿ, ಇಲ್ಲಿ ಎಷ್ಟೊಂದು
ಹೆಸರುಗಳಿವೆ. ವಿದೇಶಿಯರೂ ಸಹ ಇಲ್ಲಿ ಮಂದಿರಗಳನ್ನು ನೋಡಲು ಬರುತ್ತಾರೆ. ಪ್ರಾಚೀನ ಭಾರತವು
ಹೇಗಿತ್ತೆಂಬುದು ಪಾಪ ಅವರಿಗೆ ಗೊತ್ತಿಲ್ಲ! 5000 ವರ್ಷಗಳಿಗಿಂತಲೂ ಹಳೆಯ ವಸ್ತು ಯಾವುದೂ
ಇರುವುದಿಲ್ಲ, ಲಕ್ಷಾಂತರ ವರ್ಷಗಳ ಹಿಂದಿನ ಹಳೆಯ ವಸ್ತು ಸಿಕ್ಕಿತೆಂದು ಅವರು ತಿಳಿಯುತ್ತಾರೆ. ಆದರೆ
ತಂದೆಯು ತಿಳಿಸುತ್ತಾರೆ - ಈ ಮಂದಿರಗಳಲ್ಲಿ ಯಾವುದೆಲ್ಲಾ ಚಿತ್ರಗಳಿವೆಯೋ ಅವಕ್ಕೆ ಕೇವಲ 2500
ವರ್ಷಗಳು ಮಾತ್ರವೇ ಆಗಿದೆ. ಮೊಟ್ಟ ಮೊದಲಿಗೆ ಶಿವನ ಪೂಜೆಯು ನಡೆಯುತ್ತದೆ, ಅದು ಅವ್ಯಭಿಚಾರಿ
ಪೂಜೆಯಾಗಿದೆ. ಹಾಗೆಯೇ ಅವ್ಯಭಿಚಾರಿ ಜ್ಞಾನವೆಂದೂ ಹೇಳಲಾಗುತ್ತದೆ. ಮೊದಲು ಅವ್ಯಭಿಚಾರಿ ಪೂಜೆ
ನಂತರ ವ್ಯಭಿಚಾರಿ ಪೂಜೆಯಾಗುತ್ತದೆ. ಈಗಂತೂ ನೋಡಿ, ಕಲ್ಲು-ಮಣ್ಣು, ನೀರು ಎಲ್ಲದಕ್ಕೂ ಪೂಜೆ
ಮಾಡುತ್ತಿರುತ್ತಾರೆ.
ಈಗ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವು ಭಕ್ತಿಮಾರ್ಗದಲ್ಲಿ ಎಷ್ಟೊಂದು ಹಣವನ್ನು
ಕಳೆದಿದ್ದೀರಿ, ಎಷ್ಟೊಂದು ಶಾಸ್ತ್ರಗಳು, ಅನೇಕ ಚಿತ್ರಗಳಿವೆ! ಇವೆಲ್ಲದಕ್ಕಾಗಿ ಖರ್ಚು
ಮಾಡುತ್ತಾ-ಮಾಡುತ್ತಾ ನೋಡಿ ನೀವು ಏನಾಗಿ ಬಿಟ್ಟಿದ್ದೀರಿ! ನೆನ್ನೆಯ ದಿನ ನಿಮ್ಮನ್ನು ಡಬಲ್
ಕಿರೀಟಧಾರಿಗಳನ್ನಾಗಿ ಮಾಡಿದ್ದೆನು, ಇಂದು ನೀವು ಎಷ್ಟೊಂದು ಕಂಗಾಲರಾಗಿ ಬಿಟ್ಟಿದ್ದೀರಿ. ಇದು
ನೆನ್ನೆಯ ಮಾತಲ್ಲವೆ. ಅವಶ್ಯವಾಗಿ ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ನಾವೀಗ ಪುನಃ ಈ
ರೀತಿಯಾಗುತ್ತಿದ್ದೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ನಿಮಗೂ ತಿಳಿದಿದೆ.
ತಂದೆಯು ಮತ್ತೆ-ಮತ್ತೆ ಪುರುಷಾರ್ಥ ಮಾಡಿಸುತ್ತಾರೆ. ಗೀತೆಯಲ್ಲಿಯೂ ಮನ್ಮನಾಭವ ಎಂಬ ಶಬ್ಧವಿದೆ.
ಕೆಲವೊಂದು ಶಬ್ಧಗಳು ಸರಿಯಾಗಿವೆ. ‘ಪ್ರಾಯಃಲೋಪ’ವೆಂದು ಹೇಳಲಾಗುತ್ತದೆಯಲ್ಲವೆ. ಅಂದರೆ ದೇವಿ-ದೇವತಾ
ಧರ್ಮವಿಲ್ಲ, ಕೇವಲ ಚಿತ್ರಗಳಿವೆ. ನಿಮ್ಮ ನೆನಪಾರ್ಥವು ನೋಡಿ, ಎಷ್ಟು ಚೆನ್ನಾಗಿ ಮಾಡಲ್ಪಟ್ಟಿವೆ!
ನಾವು ಪುನಃ ಸ್ಥಾಪನೆ ಮಾಡುತ್ತಿದ್ದೇವೆ ಮತ್ತೆ ಭಕ್ತಿಮಾರ್ಗದಲ್ಲಿ ನಮ್ಮದೇ ನೆನಪಾರ್ಥ
ಮಂದಿರಗಳಾಗುತ್ತವೆ ಎಂಬುದನ್ನು ನೀವು ತಿಳಿದಿದ್ದೀರಿ. ಭೂಕಂಪ ಇತ್ಯಾದಿಗಳಾದಾಗ ಎಲ್ಲವೂ ಅದರಲ್ಲಿ
ಸಮಾಪ್ತಿಯಾಗುತ್ತದೆ. ಮತ್ತೆ ಅದೆಲ್ಲವನ್ನೂ ನೀವು ಸತ್ಯಯುಗದಲ್ಲಿ ಹೊಸದಾಗಿ ಮಾಡುತ್ತೀರಿ, ಅಲ್ಲಿ
ಕಲೆಯಿರುತ್ತದೆಯಲ್ಲವೆ. ವಜ್ರಗಳನ್ನು ಕತ್ತರಿಸುವುದೂ ಸಹ ಕಲೆಯಾಗಿದೆ. ಇಲ್ಲಿಯೂ ವಜ್ರಗಳನ್ನು
ಕತ್ತರಿಸುತ್ತಾರೆ ಮತ್ತೆ ಮಾಡುತ್ತಾರೆ. ವಜ್ರವನ್ನು ಕತ್ತರಿಸುವವರೂ ಸಹ ಬಹಳ
ಅನುಭವಿಗಳಾಗಿರುತ್ತಾರೆ. ಅವರು ಮತ್ತೆ ಆ ಕಲೆಯನ್ನು ಸಂಸ್ಕಾರದಲ್ಲಿ ತೆಗೆದುಕೊಂಡು ಹೋಗುತ್ತಾರೆ.
ಅಲ್ಲಿ ಎಷ್ಟೊಂದು ಸುಖವಿರುತ್ತದೆ, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಹೆಸರೇ ಆಗಿದೆ
ಸ್ವರ್ಗ, 100% ಸಾಹುಕಾರನಾಗಿತ್ತು, ಈಗ ಬಡ ಭಾರತವಾಗಿದೆ. ಭಾರತದಲ್ಲಿ ವಜ್ರ ವೈಡೂರ್ಯಗಳ ಫ್ಯಾಷನ್
ಬಹಳಷ್ಟಿದೆ. ಇದು ಪರಂಪರೆಯಿಂದ ನಡೆದು ಬರುತ್ತಿದೆ ಅಂದಾಗ ನೀವು ಮಕ್ಕಳಿಗೆ ಎಷ್ಟೊಂದು
ಖುಷಿಯಿರಬೇಕು! ನಿಮಗೆ ತಿಳಿದಿದೆ, ಈ ಪ್ರಪಂಚವು ಬದಲಾಗುತ್ತಿದೆ, ಈಗ ಸ್ವರ್ಗವಾಗುತ್ತಿದೆ,
ಅದಕ್ಕಾಗಿಯೇ ನಾವು ಖಂಡಿತ ಪವಿತ್ರರಾಗಬೇಕು, ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಆದ್ದರಿಂದ
ತಂದೆಯು ತಿಳಿಸುತ್ತಾರೆ - ಖಂಡಿತವಾಗಿ ಚಾರ್ಟನ್ನಿಡಿ. ನಾನಾತ್ಮನು ಯಾವುದೇ ಆಸುರೀ ಕರ್ತವ್ಯವನ್ನು
ಮಾಡಲಿಲ್ಲವೆ. ತಮ್ಮನ್ನು ಪಕ್ಕಾ ಆತ್ಮನೆಂದು ತಿಳಿಯಿರಿ. ಈ ಶರೀರದಿಂದ ಯಾವುದೇ ವಿಕರ್ಮವನ್ನು
ಮಾಡಲಿಲ್ಲವೆ. ಒಂದುವೇಳೆ ಮಾಡಿದರೆ ರಿಜಿಸ್ಟರ್ ಹಾಳಾಗುವುದು. ಇದು 21 ಜನ್ಮಗಳ ಲಾಟರಿಯಾಗಿದೆ,
ಜೊತೆಗೆ ರೇಸ್ ಆಗಿದೆ. ಹೇಗೆ ಕುದುರೆಗಳ ಓಟವಿರುತ್ತದೆಯಲ್ಲವೆ. ಇದಕ್ಕೆ ರಾಜಸ್ವ ಅಶ್ವಮೇಧ ರುದ್ರ
ಜ್ಞಾನ ಯಜ್ಞ..... ಎಂದು ಹೇಳುತ್ತಾರೆ. ಸ್ವ ರಾಜ್ಯಕ್ಕಾಗಿ ನೀವಾತ್ಮಗಳು ಸ್ಪರ್ಧೆ ಮಾಡಬೇಕಾಗಿದೆ.
ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಇದಕ್ಕೆ ಮಧುರ ಶಾಂತಿಧಾಮವೆಂದು ಹೇಳಲಾಗುತ್ತದೆ. ಈ
ಶಬ್ಧವನ್ನು ನೀವೀಗ ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೆಚ್ಚಿನ ಪರಿಶ್ರಮ ಪಡಿ.
ಈಗ ರಾಜ್ಯ ಪದವಿ ಸಿಗುತ್ತದೆ, ಇದು ಕಡಿಮೆ ಮಾತೇನು! ನಾನಾತ್ಮನಾಗಿದ್ದೇನೆ, ನಾನು ಇಷ್ಟು
ಜನ್ಮಗಳನ್ನು ತೆಗೆದುಕೊಂಡಿದ್ದೇನೆ, ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ 84 ಜನ್ಮಗಳು
ಮುಕ್ತಾಯವಾಯಿತು. ಈಗ ಪುನಃ ಮೊದಲನೇ ನಂಬರಿನಿಂದ ಆರಂಭಿಸಬೇಕಾಗಿದೆ. ಹೊಸ ಮಹಲುಗಳಲ್ಲಿ ಅವಶ್ಯವಾಗಿ
ಮಕ್ಕಳೇ ಕುಳಿತುಕೊಳ್ಳುತ್ತಾರೆ. ಹಳೆಯದರಲ್ಲಂತೂ ಕುಳಿತುಕೊಳ್ಳುವುದಿಲ್ಲ. ತಾವು ಹಳೆಯ ಮನೆಯಲ್ಲಿ
ಕುಳಿತು ಹೊಸದನ್ನು ಬಾಡಿಗೆಯವರಿಗೆ ಕೊಡುವುದಿಲ್ಲ. ನೀವು ಎಷ್ಟು ಪರಿಶ್ರಮ ಪಡುತ್ತೀರೋ ಅಷ್ಟು ಹೊಸ
ಪ್ರಪಂಚದ ಮಾಲೀಕರಾಗುತ್ತೀರಿ. ಹೊಸ ಮನೆಯು ತಯಾರಾದಾಗ ಹಳೆಯದನ್ನು ಬಿಟ್ಟು ಹೋಗಿ ಹೊಸ ಮನೆಯಲ್ಲಿ
ಇರಬೇಕೆಂದು ಮನಸ್ಸಾಗುತ್ತದೆ. ಯಾವಾಗ ಮೊದಲಿನ ಮನೆಯು ಹಳೆಯದಾಗುವುದೋ ಆಗಲೇ ತಂದೆಯು ಮಕ್ಕಳಿಗಾಗಿ
ಹೊಸ ಮನೆಯನ್ನು ಕಟ್ಟಿಸುತ್ತಾರೆ. ಇಲ್ಲಂತೂ ಬಾಡಿಗೆಗೆ ಕೊಡುವ ಮಾತೇ ಇಲ್ಲ. ಹೇಗೆ ವಿಜ್ಞಾನಿಗಳು
ಚಂದ್ರ ಗ್ರಹದಲ್ಲಿ ಫ್ಲಾಟನ್ನು ತೆಗೆಯುವ ಪ್ರಯತ್ನ ಪಡುತ್ತಾರೆ ಆದರೆ ನೀವು ಸ್ವರ್ಗದಲ್ಲಿ ಫ್ಲಾಟ್
ತೆಗೆದುಕೊಳ್ಳುತ್ತಿದ್ದೀರಿ. ಎಷ್ಟೆಷ್ಟು ಜ್ಞಾನ ಯೋಗದಲ್ಲಿರುತ್ತೀರೋ ಅಷ್ಟು ಪವಿತ್ರರಾಗುತ್ತೀರಿ.
ಇದು ರಾಜಯೋಗವಾಗಿದೆ, ಇದರಿಂದ ಎಷ್ಟು ದೊಡ್ಡ ರಾಜ್ಯಭಾಗ್ಯವು ಸಿಗುತ್ತದೆ. ಉಳಿದಂತೆ ಚಂದ್ರ
ಮೊದಲಾದ ಗ್ರಹಗಳಲ್ಲಿ ಫ್ಲಾಟ್ ತೆಗೆಯಲು ವಿಜ್ಞಾನಿಗಳು ಹುಡುಕುತ್ತಿರುವುದೆಲ್ಲವೂ ವ್ಯರ್ಥವಾಗಿದೆ.
ಈಗ ಸುಖ ಕೊಡುತ್ತಿರುವ ವಸ್ತುಗಳೇ ನಂತರ ವಿನಾಶ ಮಾಡಲು ಮತ್ತು ದುಃಖವನ್ನು ಕೊಡಲು
ನಿಮಿತ್ತನಾಗುತ್ತವೆ. ಮುಂದೆ ಹೋದಂತೆ ಸೇನೆಯು ಕಡಿಮೆಯಾಗಿ ಬಿಡುತ್ತದೆ. ಬಾಂಬುಗಳಿಂದಲೇ ಬೇಗ ಬೇಗನೆ
ಕೆಲಸವು ನಡೆಯುತ್ತಾ ಹೋಗುತ್ತದೆ. ಈ ಡ್ರಾಮಾ ಮಾಡಲ್ಪಟ್ಟಿದೆ. ಸಮಯದಲ್ಲಿ ಆಕಸ್ಮಿಕವಾಗಿ
ವಿನಾಶವಾಗುತ್ತದೆ. ಸಿಪಾಯಿಗಳೂ ಸಹ ಮರಣ ಹೊಂದುತ್ತಾರೆ, ನೋಡಲು ಮಜವಾಗಿರುತ್ತದೆ. ನೀವೀಗ
ಫರಿಶ್ತೆಗಳಾಗುತ್ತಿದ್ದೀರಿ. ನಿಮಗೆ ತಿಳಿದಿದೆ, ನಮಗಾಗಿಯೇ ವಿನಾಶವಾಗುತ್ತದೆ. ಡ್ರಾಮಾದಲ್ಲಿ
ಪಾತ್ರವಿದೆ, ಹಳೆಯ ಪ್ರಪಂಚವು ಸಮಾಪ್ತಿಯಾಗುವುದು. ಯಾರು ಎಂತಹ ಕರ್ಮ ಮಾಡುವರೋ ಅದರಂತೆಯೇ
ಭೋಗಿಸಬೇಕಲ್ಲವೆ. ಉದಾಹರಣೆಗೆ - ಒಳ್ಳೆಯ ಸನ್ಯಾಸಿಗಳಾಗಿದ್ದರೂ ಸಹ ಪುನಃ ಗೃಹಸ್ಥಿಗಳ ಬಳಿಯೇ ಜನ್ಮ
ಪಡೆಯುತ್ತಾರಲ್ಲವೆ. ಶ್ರೇಷ್ಠ ಜನ್ಮವಂತೂ ನಿಮಗೆ ಹೊಸ ಪ್ರಪಂಚದಲ್ಲಿಯೇ ಸಿಗುವುದು.
ಸಂಸ್ಕಾರದನುಸಾರ ಹೋಗಿ ಜನ್ಮ ಪಡೆಯುತ್ತೀರಿ. ನೀವೀಗ ಹೊಸ ಪ್ರಪಂಚಕ್ಕಾಗಿ ಸಂಸ್ಕಾರವನ್ನು
ತೆಗೆದುಕೊಂಡು ಹೋಗುತ್ತೀರಿ. ಯಾರು ಬಹಳ ಧಾರ್ಮಿಕ ವ್ಯಕ್ತಿಗಳಿರುವರೋ ಅವರ ಬಳಿ ಜನ್ಮ ಪಡೆಯುತ್ತೀರಿ
ಏಕೆಂದರೆ ನೀವು ಅಂತಹ ಒಳ್ಳೆಯ ಕರ್ಮ ಮಾಡುತ್ತೀರಿ. ಎಂತೆಂತಹ ಸಂಸ್ಕಾರವೋ ಅದರನುಸಾರ
ಜನ್ಮವಾಗುತ್ತದೆ. ನೀವು ಬಹಳ ಶ್ರೇಷ್ಠ ಕುಲದಲ್ಲಿ ಹೋಗಿ ಜನ್ಮ ಪಡೆಯುತ್ತೀರಿ. ನಿಮ್ಮ ಹಾಗೆ ಕರ್ಮ
ಮಾಡುವವರು ಮತ್ತ್ಯಾರೂ ಇಲ್ಲ. ಎಂತಹ ಸೇವೆ, ಎಂತಹ ವಿದ್ಯಾಭ್ಯಾಸವೋ ಅಂತಹ ಜನ್ಮವಾಗುವುದು.
ಸಾಯುವುದಂತೂ ಅನೇಕರು ಸಾಯುವರು. ತಂದೆಯು ತಿಳಿಸುತ್ತಾರೆ - ಈಗ ಈ ಪ್ರಪಂಚವು ಬದಲಾಗುತ್ತಿದೆ,
ತಂದೆಯು ಸಾಕ್ಷಾತ್ಕಾರ ಮಾಡಿಸಿದ್ದಾರೆ - ಇವರು (ಬ್ರಹ್ಮಾ) ತಮ್ಮ ಅನುಭವವನ್ನು ತಿಳಿಸುತ್ತಾರೆ,
21 ಜನ್ಮಗಳಿಗಾಗಿ ರಾಜ್ಯಭಾಗ್ಯ ಸಿಗುತ್ತದೆಯೆಂಬುದನ್ನು ನೋಡಿದಾಗ ಅದರ ಮುಂದೆ ಈ 10-20 ಲಕ್ಷಗಳೇನೂ
ದೊಡ್ಡದಲ್ಲ ಎನಿಸಿತು. ಅಲೀಫನಿಗೆ ಅಲ್ಲಾ ಸಿಕ್ಕಿದರು, ಅದರ ಮುಂದೆ ಇದೆಲ್ಲವೂ ಗುಲಾಮೀತನವೆನಿಸಿತು.
ಆಗ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ಭಾಗೀಧಾರನಿಗೆ ಹೇಳಿ ಬಿಟ್ಟರು. ಏನೂ ಕಷ್ಟವಾಗಲಿಲ್ಲ,
ಹಾಗೆಯೇ ಮಕ್ಕಳಿಗೂ ತಿಳಿಸಲಾಗುತ್ತದೆ - ತಂದೆಯಿಂದ ನೀವು ಏನು ತೆಗೆದುಕೊಳ್ಳುತ್ತೀರಿ? ಸ್ವರ್ಗದ
ರಾಜ್ಯಭಾಗ್ಯ. ಎಷ್ಟು ಸಾಧ್ಯವೋ ಸೇವಾಕೇಂದ್ರಗಳನ್ನು ತೆರೆಯುತ್ತಾ ಹೋಗಿ, ಅನೇಕರ ಕಲ್ಯಾಣ ಮಾಡಿ.
21 ಜನ್ಮಗಳಿಗಾಗಿ ನಿಮ್ಮ ಸಂಪಾದನೆಯಾಗುತ್ತಿದೆ. ಇಲ್ಲಂತೂ ಲಕ್ಷಾಧಿಪತಿ, ಕೋಟ್ಯಾಧಿಪತಿಗಳು ಬಹಳ
ಮಂದಿ ಇದ್ದಾರೆ ಆದರೆ ಎಲ್ಲರೂ ಭಿಕಾರಿಗಳಾಗಿದ್ದಾರೆ. ನಿಮ್ಮ ಬಳಿ ಕೊನೆಗೆ ಅನೇಕ ಮಂದಿ ಬರುವರು.
ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ಅನೇಕರು ಪ್ರಜೆಗಳಾಗುತ್ತಾರೆ, ಚೆನ್ನಾಗಿದೆ
ಚೆನ್ನಾಗಿದೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ ಆದರೆ ನಮಗೆ ಬಿಡುವಿಲ್ಲವೆಂದು ಹೇಳಿ ಬಿಡುತ್ತಾರೆ.
ಸ್ವಲ್ಪ ಕೇಳಿದರೂ ಸಹ ಪ್ರಜೆಗಳಲ್ಲಿ ಬರುತ್ತಾರೆ. ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ. ತಂದೆಯ
ಪರಿಚಯ ಕೊಡುವುದು ಕಡಿಮೆ ಮಾತಲ್ಲ. ಕೆಲಕೆಲವರು ರೋಮಾಂಚನವಾಗಿ ನಿಂತು ಬಿಡುತ್ತಾರೆ. ಒಂದುವೇಳೆ
ಶ್ರೇಷ್ಠ ಪದವಿಯನ್ನು ಪಡೆಯುವುದಿದ್ದರೆ ಬಹು ಬೇಗನೆ ಪುರುಷಾರ್ಥ ಮಾಡತೊಡಗುತ್ತಾರೆ. ತಂದೆಯು
ಯಾರಿಂದಲೂ ಹಣ ಇತ್ಯಾದಿಗಳನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳ ಒಂದೊಂದು ಹನಿ ಕೂಡಿ
ಹಳ್ಳವಾಗುತ್ತದೆ. ಕೆಲವರು ಒಂದು ರೂಪಾಯಿಯನ್ನೂ ಕಳುಹಿಸುತ್ತಾರೆ - ಬಾಬಾ, ಇದರಿಂದ ಒಂದು
ಇಟ್ಟಿಗೆಯನ್ನಾದರೂ ಹಾಕಿರಿ. ಸುಧಾಮನ ಹಿಡಿ ಅವಲಕ್ಕಿಯ ಗಾಯನವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ
- ನಿಮ್ಮದು ಇದು ವಜ್ರ ವೈಡೂರ್ಯಗಳಾಗಿವೆ, ಎಲ್ಲರದೂ ವಜ್ರ ಸಮಾನ ಜನ್ಮವಾಗುತ್ತದೆ. ನೀವು
ಭವಿಷ್ಯಕ್ಕಾಗಿ ಭಾಗ್ಯ ಮಾಡಿಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ - ಈ ಕಣ್ಣುಗಳಿಂದ
ಏನೆಲ್ಲವನ್ನು ನೋಡುತ್ತಿದ್ದೀರೋ ಇದೆಲ್ಲವೂ ಹಳೆಯ ಪ್ರಪಂಚವಾಗಿದೆ. ಈ ಪ್ರಪಂಚವು ಈಗ ಬದಲಾಗುತ್ತಿದೆ.
ನೀವೀಗ ಅಮರ ಪುರಿಯ ಮಾಲೀಕರಾಗುತ್ತಿದ್ದೀರಿ ಅಂದಮೇಲೆ ಅವಶ್ಯವಾಗಿ ಮೋಹಜೀತರಾಗಬೇಕಾಗಿದೆ. ಬಾಬಾ,
ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆಂದು ನೀವು ಹೇಳುತ್ತಾ ಬಂದಿದ್ದೀರಿ. ಇದು ಒಳ್ಳೆಯ
ವ್ಯಾಪಾರವಲ್ಲವೆ. ತಂದೆಗೆ ರತ್ನಾಗಾರ, ಜಾದೂಗಾರ, ಸೌಧಾಗಾರರೆಂದು ಏಕೆ ಹೆಸರು ಬಂದಿದೆ ಎಂಬುದನ್ನು
ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯು ರತ್ನಾಗಾರನಲ್ಲವೆ. ಅವಿನಾಶಿ ಜ್ಞಾನ ರತ್ನಗಳು ಒಂದೊಂದೂ ಸಹ
ಅಮೂಲ್ಯ ಮಹಾವಾಕ್ಯಗಳಾಗಿವೆ. ಇದರ ಮೇಲೆ ರೂಪ ಭಸಂತನ ಕಥೆಯಿದೆಯಲ್ಲವೆ. ನೀವು ರೂಪನೂ ಆಗಿದ್ದೀರಿ,
ಭಸಂತರೂ ಆಗಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈಗ ಈ
ಶರೀರದಿಂದ ಯಾವುದೇ ವಿಕರ್ಮ ಮಾಡಬಾರದು. ರಿಜಿಸ್ಟರ್ ಹಾಳಾಗುವಂತಹ ಯಾವುದೇ ಆಸುರೀ ಕರ್ಮ ಮಾಡಬಾರದು.
2. ಒಬ್ಬ ತಂದೆಯ ನೆನಪಿನ ನಶೆಯಲ್ಲಿರಬೇಕಾಗಿದೆ. ಪಾವನರಾಗುವ ಮೂಲ ಪುರುಷಾರ್ಥವನ್ನು ಖಂಡಿತ
ಮಾಡಬೇಕಾಗಿದೆ. ಕವಡೆಗಳ ಹಿಂದೆ ತಮ್ಮ ಅಮೂಲ್ಯ ಸಮಯವನ್ನು ನಷ್ಟ ಮಾಡಿಕೊಳ್ಳದೆ ಶ್ರೀಮತದಿಂದ
ಜೀವನವನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ.
ವರದಾನ:
ಸ್ವಯಂ ಮೋಲ್ಡ್
ಆಗಿ ನಿಜವಾದ ಚಿನ್ನ ಆಗಿ ಎಲ್ಲಾ ಕಾರ್ಯದಲ್ಲಿ ಸಫಲರಾಗುವಂತಹ ಸ್ವ-ಪರಿವರ್ತಕ ಭವ.
ಯಾರು ಎಲ್ಲಾ
ಪರಿಸ್ಥಿತಿಯಲ್ಲಿ ಸ್ವಯಂನ್ನು ಪರಿವರ್ತನೆ ಮಾಡಿಕೊಂಡು ಸ್ವ-ಪರಿವರ್ತಕರಾಗುತ್ತಾರೆ ಅವರು ಸದಾ
ಸಫಲರಾಗುತ್ತಾರೆ. ಆದ್ದರಿಂದ ಸ್ವಯಂನ್ನು ಬದಲಾಯಿಸಿಕೊಳ್ಳುವ ಲಕ್ಷ್ಯವಿಟ್ಟುಕೊಳ್ಳಿ. ಬೇರೆಯವರು
ಬದಲಾದರೆ ನಾನು ಬದಲಾಗುತ್ತೇನೆ ಎಂದಲ್ಲ. ಬೇರೆಯವರು ಬದಲಾಗಲಿ ಬಿಡಲಿ ನಾನು ಬದಲಾಗಬೇಕು. ಹೆ!
ಅರ್ಜುನ ನಾನಾಗಬೇಕು. ಸದಾ ಪರಿವರ್ತನೆಯಾಗುವುದರಲ್ಲಿ ಮೊದಲು ನಾನು. ಯಾರು ಇದರಲ್ಲಿ ಮೊದಲು ನಾನು
ಎಂದು ಮಾಡುತ್ತಾರೆ ಅವರೇ ಮೊದಲನೇ ನಂಬರ್ ಆಗಿ ಬಿಡುತ್ತಾರೆ ಏಕೆಂದರೆ ಸ್ವಯಂಗೆ ಮೋಲ್ಡ್
ಮಾಡಿಕೊಳ್ಳುವವರು ರಿಯಲ್ ಗೋಲ್ಡ್ ಆಗಿರುತ್ತಾರೆ. ರಿಯಲ್ ಗೋಲ್ಡ್ ಮಾತ್ರವೇ ಮೌಲ್ಯುಳ್ಳದ್ದಾಗಿದೆ.
ಸ್ಲೋಗನ್:
ತಮ್ಮ ಶ್ರೇಷ್ಠ ಜೀವನದ
ಪ್ರತ್ಯಕ್ಷ ಪ್ರಮಾಣದ ಮುಖಾಂತರ ತಂದೆಯನ್ನು ಪ್ರತ್ಯಕ್ಷ ಮಾಡಿ.